
ಯಲ್ಲಾಪುರ: ಸ್ವಾವಲಂಬಿಯನ್ನು ಪರಾವಲಂಬಿಯಾಗಿ ಮಾಡುವ ಶಿಕ್ಷಣ ವ್ಯವಸ್ಥೆ ಬ್ರಿಟಿಷರಿಂದ ಬಂದಿದೆ. ಇಂತಹ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಿ ಸಂಸ್ಕಾರಯುತ, ವ್ಯಕ್ತಿ ನಿರ್ಮಾಣ, ನೈತಿಕತೆಯ ಶಿಕ್ಷಣ ನೀಡುವುದಕ್ಕಾಗಿ ನೂತನ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ ಎಂದು ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ ಹೇಳಿದರು.
ಅವರು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ವಿಶ್ವದರ್ಶನ ಪಿ.ಯು ಕಾಲೇಜು ಹಾಗೂ ಕೇಂದ್ರಿಯ ಶಾಲೆಯನ್ನು ಉದ್ಘಾಟಿಸಿ, “ಶಿಕ್ಷಣ, ಸಂಸ್ಕಾರ, ರಾಷ್ಟ್ರ ನಿರ್ಮಾಣ” ವಿಷಯದ ಕುರಿತು ಮಾತನಾಡಿದರು.
ರಾಮಾಯಣದ ಕಾಲದಲ್ಲಿ ಗುರುಕುಲ ಪದ್ದತಿ ಶಿಕ್ಷಣ, ಮಹಾಭಾರತ ಕಾಲದಲ್ಲಿ ಶಕ್ತಿ ಆಧರಿತ ಶಿಕ್ಷಣ ಪದ್ದತಿ ಇತ್ತು. ರಾಮಾಯಣ, ಮಹಾ ಭಾರತದ ಕಾಲದಿಂದಲೂ ಕಾಲಕ್ಕೆ ತಕ್ಕಂತೆ ಶಿಕ್ಷಣ ಪದ್ದತಿಯನ್ನು ಬದಲಾಯಿಸಲಾಗುತ್ತಿದೆ. ಪ್ರಪಂಚದ ಏಳಿಗೆಗೆ ಭಾರತ ಅನಿವಾರ್ಯವಾಗಿದ್ದು, ಇಲ್ಲಿ ಶಿಕ್ಷಣ ಪದ್ಧತಿ ಬದಲಾವಣೆ ಮಾಡದೇ ಇದ್ದಿದ್ದರೆ ಉತ್ತಮ ಭವಿಷ್ಯ ಅಸಾಧ್ಯವಾಗಿತ್ತು ಎಂದರು. ಬ್ರಿಟೀಷರು ತಮ್ಮ ಕೆಳಗೆ ಭಾರತಿಯರು ದುಡಿಯಬೇಕು ಎಂಬ ಪರಾವಲಬಿ ಶಿಕ್ಷಣ ಪದ್ದತಿಯನ್ನು ಜಾರಿಗೆ ತಂದಿದ್ದರು. ಶಿಕ್ಷಣ ವ್ಯವಸ್ಥೆಯಲ್ಲಿ ಸಂಸ್ಕಾರ ಕೊಡದ ಪರಿಣಾಮ ಉದ್ದಿಮೆಗಳ ಮುಂದೆ ಕೆಲಸ ಖಾಲಿ ಇರುವ ನಾಮಫಲಕ ಇದ್ದರೂ, ಓದಿದವರಿಗೆ ಉದ್ಯೋಗ ದೊರೆಯುತ್ತಿರಲಿಲ್ಲ. ಈವರೆಗೆ ಭಾರತದಲ್ಲಿ ಶಿಕ್ಷಣ ನೀತಿಯನ್ನು ಎರಡು ಬಾರಿ ಬದಲಾಯಿಸಲಾಗಿತ್ತು. ಆದರೆ, ಅದರಲ್ಲಿ ಭಾರತೀಯತೆಯನ್ನು ಅಳವಡಿಸುವ ಪ್ರಯತ್ನ ಆಗಿರಲಿಲ್ಲ. ಅದನ್ನು ನೂತನ ಶಿಕ್ಷಣ ನೀತಿ ಸಾಕಾರಗೊಳಿಸುತ್ತಿದೆ ಎಂದರು.
ಬೆಂಗಳೂರಿನ ಉದ್ಯಮಿ ಎಚ್.ಎಸ್.ಶೆಟ್ಟಿ ಅವರಿಗೆ ಪ್ರಸಕ್ತ ಸಾಲಿನ “ವಿಶ್ವದರ್ಶನ ಪುರಸ್ಕಾರ” ನೀಡಿ ಗೌರವಿಸಲಾಯಿತು. ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್, ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ, ಶಾಂತಾರಾಮ ಸಿದ್ದಿ, ವಾ.ಕ.ರ.ಸಾ ನಿಗಮದ ಅಧ್ಯಕ್ಷರಾದ ವಿ.ಎಸ್.ಪಾಟೀಲ, ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಪ್ರಮೋದ ಹೆಗಡೆ, ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹರಿಪ್ರಕಾಶ ಕೋಣೆಮನೆ, ಉಪಾಧ್ಯಕ್ಷರಾದ ಶ್ರೀನಿವಾಸ ಹೆಬ್ಬಾರ್, ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ ಇತರರಿದ್ದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಇಡಗುಂದಿಯಲ್ಲಿರುವ ವಿಶ್ವದರ್ಶನ ಕನ್ನಡ ಮಾಧ್ಯಮ ಶಾಲೆಗೆ ಶುಕ್ರವಾರ ತಡರಾತ್ರಿ ಭೇಟಿ ನೀಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅಲ್ಲಿನ ಮಕ್ಕಳು ತಯಾರಿಸಿದ್ದ ಕರಕುಶಲ ಮಾದರಿಗಳನ್ನು ವೀಕ್ಷಿಸಿದರು. ವಿಜ್ಞಾನ ಮಾದರಿಗಳ ಕುರಿತು ಮಕ್ಕಳಿಂದ ಮಾಹಿತಿ ಪಡೆದರು. ಖಾಸಗಿ ಶಾಲೆಗಳಿಗೆ ಪೈಪೊಟಿ ನೀಡುವಂತೆ ಮೂಲಭೂತ ಸೌಕರ್ಯಗಳನ್ನು ಹೊಂದಿದ ಸರ್ಕಾರಿ ಅನುದಾನಿತ ಶಾಲೆಯ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ನವೀಕೃತ ಕಟ್ಟಡವನ್ನು ಉದ್ಘಾಟಿಸಿದ ಅವರು ಮಕ್ಕಳ ಜೊತೆ ಫೋಟೋಗಳನ್ನು ತೆಗಿಸಿಕೊಂಡರು.
