
ಯಲ್ಲಾಪುರ: ದೇಶದ ಯಾವುದೇ ಮೂಲೆಯಲ್ಲಿದ್ದರೂ ದೂರ ಶಿಕ್ಷಣದ ಮೂಲಕ ಶಿಕ್ಷಣ ಪಡೆಯುವ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕಲ್ಪಿಸಿದೆ ಎಂದು ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ. ವಿದ್ಯಾಶಂಕರ್ ಅವರು ಹೇಳಿದರು.
ಬುಧವಾರ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ “ಕಲಿಕಾರ್ಥಿ ಸಹಾಯ ಕೇಂದ್ರ”ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆನ್ ಲೈನ್ ಮೂಲಕ ಭಾಗವಹಿಸಿ ಅವರು ಮಾತನಾಡಿದರು.
ದೂರ ಶಿಕ್ಷಣ ವ್ಯವಸ್ಥೆಯಿಂದಾಗಿ ಸಾಕಷ್ಟು ಜನರಿಗೆ ಅನುಕೂಲವಾಗಿದೆ. ಗೃಹಿಣಿಯರು, ವೃತ್ತಿ ನಿರತರು ಸೇರಿದಂತೆ ಹಲವರು ಉನ್ನತ ವ್ಯಾಸಂಗಕ್ಕಾಗಿ ದೂರ ಶಿಕ್ಷಣ ವ್ಯವಸ್ಥೆಯನ್ನು ಅವಲಂಭಿಸಿದ್ದಾರೆ. ಮನೆಯಲ್ಲಿಯೇ ಕುಳಿತು ಶಿಕ್ಷಣ ಪಡೆಯುವ ಈ ಪದ್ದತಿ ಈಚೆಗೆ ಸಾಕಷ್ಟು ಜನಪ್ರಿಯವಾಗುತ್ತಿದೆ. ದೂರ ಶಿಕ್ಷಣ ವ್ಯವಸ್ಥೆ ಮೂಲಕ ಉನ್ನತ ಶಿಕ್ಷಣ ಪಡೆದವರು ದೊಡ್ಡ ಹುದ್ದೆಗಳಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ ಎಂದು ಅವರು ಹೇಳಿದರು.
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯರಾದ ಶಾಂತರಾಮ ಸಿದ್ದಿ ಅವರು ಮಾತನಾಡಿ, ಸಂಸ್ಕಾರ ಸಹಿತ ಶಿಕ್ಷಣ ಸಹಬಾಳ್ವೆ ಮತ್ತು ಸಹ ಜೀವನ ಪದ್ದತಿಯನ್ನು ಕಲಿಸುತ್ತದೆ. ವಿಶ್ವದರ್ಶನ ಶಿಕ್ಷಣ ಸಂಸ್ಥೆಯಿoದ ಗ್ರಾಮೀಣ ಭಾಗದವರಿಗೆ ಸಾಕಷ್ಟು ಅನುಕೂಲವಾಗಿದೆ. ಇದೀಗ ದೂರ ಶಿಕ್ಷಣ ವ್ಯವಸ್ಥೆಯನ್ನು ಪ್ರಾರಂಭಿಸಿರುವುದು ಉದ್ಯೋಗ ಮತ್ತು ಶಿಕ್ಷಣ ಎರಡಕ್ಕೂ ಅವಕಾಶ ಕಲ್ಪಿಸಿದಂತಾಗಿದೆ. ಕೆ.ಎಸ್.ಒ.ಯು ಅವರ ದೂರ ಶಿಕ್ಷಣ ವ್ಯವಸ್ಥೆಯಿಂದ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದೂಳಿದವರಿಗೆ ಸಹಾಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕರಾದ ನರಸಿಂಹ ಕೋಣೆಮನೆ ಅವರು ಮಾತನಾಡಿ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಕೆ.ಎಸ್.ಒ.ಯು ಕಲಿಕಾರ್ಥಿ ಸಹಾಯ ಕೇಂದ್ರ ಪ್ರಾರಂಭಿಸಿರುವುದರಿoದ ಯಲ್ಲಾಪುರ, ಮುಂಡಗೋಡು, ಶಿರಸಿ ಹಾಗೂ ಸಿದ್ದಾಪುರ ಭಾಗದ ಅನೇಕರಿಗೆ ಸಹಾಯ ಆಗಲಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಸಾಧನೆ ಮಾಡಬೇಕು ಎಂದರು. ಸಂಸ್ಥೆಯ ನಿರ್ದೇಶಕರಾದ ಗುರುರಾಜ ಕುಂದಾಪುರ, ವಿವಿಧ ಅಂಗಸoಸ್ಥೆಗಳ ಮುಖ್ಯಸ್ಥರಾದ ಡಿ.ಕೆ ಗಾಂವ್ಕರ್, ಪ್ರಸನ್ನ ಹೆಗಡೆ, ಎಸ್.ಎಲ್ ಭಟ್ಟ, ಮುಕ್ತಾ ಶಂಕರ್ ಮೊದಲಾದವರು ಇದ್ದರು.
