
ಯಲ್ಲಾಪುರ: ಪುರುಷ ಹಾಗೂ ಮಹಿಳೆ ಎಂಬ ತಾರತಮ್ಯ ಮಾಡದೇ ಮಹಿಳೆಯರನ್ನು ಗೌರವಿಸುವ ಸಮಾಜ ಇನ್ನಷ್ಟು ಸದೃಢವಾಗಬೇಕಿದೆ ಎಂದು ಉಪನ್ಯಾಸಕಿ ಶ್ಯಾಮಲಾ ಕೆರೆಗದ್ದೆ ಹೇಳಿದರು.
ಅವರು ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಹಿಳಾ ಸಮಾನತಾ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು. ಶಿಕ್ಷಣ, ಆರ್ಥಿಕತೆ ಸೇರಿದಂತೆ ಹಲವು ವಿಷಯಗಳಲ್ಲಿ ಮೊದಲು ಮಹಿಳೆಯರಿಗೆ ಅವಕಾಶ ಇರಲಿಲ್ಲ. ಬದಲಾದ ಕಾಲಘಟ್ಟದಲ್ಲಿ ಮಹಿಳೆಯರು ಸಹ ಪುರುಷರಿಗೆ ಸರಿ ಸಮಾನವಾಗಿ ದುಡಿಯುತ್ತಿದ್ದಾರೆ. ಪುರುಷ ಹಾಗೂ ಮಹಿಳೆ ಎಂಬ ತಾರತಮ್ಯ ಮರೆತು ಮಹಿಳೆಯರನ್ನು ಗೌರವಿಸುವ ಮನಸ್ಥಿತಿ ಇನ್ನಷ್ಟು ಹೆಚ್ಚಳವಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮ ಉದ್ಘಾಟಿಸಿದ ಉಪನ್ಯಾಸಕಿ ಗೀತಾ ಎಚ್.ವಿ ಮಾತನಾಡಿ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರತಿಯೊಬ್ಬರೂ ಆದ್ಯತೆ ಕೊಡಬೇಕು ಎಂದು ಹೇಳಿದರು. ಮಹಿಳಾ ಸಮಾನತೆಯ ಪೋಸ್ಟರ್ ಗಳನ್ನು ಪ್ರದರ್ಶಿಸಲಾಯಿತು. ಮಂಜುಳಾ ಸಿದ್ಧಿ ಪ್ರಾರ್ಥಿಸಿದರು. ಪ್ರೇಮಾ ಗಾಂವ್ಕರ್ ನಿರ್ವಹಿಸಿದರು. ನೀತಾ ನಾಯ್ಕ ತಾಂತ್ರಿಕ ನಿರ್ವಹಣೆ ನೋಡಿಕೊಂಡರು. ಖೈರುನ್ ಶೇಖ್ ನಿರ್ವಹಿಸಿದರು. ಆನ್ ಲೈನ್ ಮೂಲಕ ವಿದ್ಯಾರ್ಥಿಗಳು ಹಾಗೂ ಪಾಲಕರು ಕಾರ್ಯಕ್ರಮ ವೀಕ್ಷಿಸಿದರು.
