
ಯಲ್ಲಾಪುರ: ತಾಲೂಕಿನ ವಿಶ್ವದರ್ಶನ ಶಿಕ್ಷಣ ಸಂಸ್ಥೆಗೆ ಪ್ರವೇಶ ಬಯಸಿ ಆಗಮಿಸಿದ ವಿದ್ಯಾರ್ಥಿಗಳನ್ನು ಸೋಮವಾರ ಆಡಳಿತ ಮಂಡಳಿ ಆತ್ಮೀಯವಾಗಿ ಬರ ಮಾಡಿಕೊಂಡಿದೆ.
ಪಟ್ಟಣದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಮಾತನಾಡಿದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ನಿರ್ದೇಶಕ ನರಸಿಂಹಮೂರ್ತಿ ಕೋಣೆಮನೆ, ಶಾಲಾ ಆವರಣದಲ್ಲಿ ಕೊರೊನಾ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಸಹ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ಕರೆ ನೀಡಿದರು. ಭವ್ಯ ಭವಿಷ್ಯ ರೂಪಿಸಿಕೊಳ್ಳುವುದಕ್ಕಾಗಿ ವಿದ್ಯಾರ್ಥಿಗಳು ಮನೋಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು. ಹರಿಹರಪುರ ಪ್ರಭೋಧಿನಿ ಗುರುಕುಲದ ಶೈಕ್ಷಣಿಕ ಮೇಲ್ವಿಚಾರಕ ನಾರಾಯಣ ಶೇವಿರೆ ಮಾತನಾಡಿ, ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಪರಸ್ಪರ ವಿಚಾರ ವಿನಿಮಯ ಆಗಬೇಕು. ಸಂಸ್ಕಾರಯುತ ಶಿಕ್ಷಣದ ಬಗ್ಗೆ ಚರ್ಚೆ ನಡೆಯಬೇಕು ಎಂದು ಹೇಳಿದರು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಗುರುರಾಜ ಕುಂದಾಪುರ, ಪ್ರಾಂಶುಪಾಲ ಗಣೇಶ ಭಟ್, ಉಪ ಪ್ರಾಂಶುಪಾಲೆ ಆಸ್ಮಾ ಶೇಖ್ ಇತರರು ಇದ್ದರು.